About this book
ಹೊಸಗನ್ನಡ ಸಾಹಿತ್ಯದ ವಸ್ತುಗಳೇ ಹೀಗೆ; ಭಾವದ ಚಿಲುಮೆಯಲ್ಲಿ ಮುಳುಗಿಸುವ ಅಂತರ್ ಶಕ್ತಿಯನ್ನು ಒಳಗೊಂಡಿವೆಯೆಂದ ಮಾತ್ರಕ್ಕೆ ಅನ್ಯ ಸಾಹಿತ್ಯದಲ್ಲಿ ಇಲ್ಲಿ ಆಯ್ದುಕೊಂಡಿರುವ ವಸ್ತು ವಿಷಯಗಳಾದ ಬದುಕಿನ ಅನಿಶ್ಚಿತತೆ, ಜೀವನಪಾಠ, ಪ್ರೀತಿ-ಪ್ರೇಮ, ಮಮತೆ, ಬಡತನ, ಮಧ್ಯಮ ವರ್ಗದ ಸ್ಥಿತಿಗತಿಗಳು ಕಾಣಸಿಗುವುದೇ ಇಲ್ಲವೆಂದಲ್ಲ; ಕನ್ನಡ ಸಾಹಿತ್ಯವು ತನ್ನ ಸ್ವಂತಿಕೆಯನ್ನು ಮರೆತಿಲ್ಲವೆಂದರ್ಥ. ಈ ಮಣ್ಣಿನ ಸತ್ಡ ಹೀರಿ ಬೆಳೆಯುವಲ್ಲಿ ಅದು ಹಿಂದೆ ಬಿದ್ದಿಲ್ಲವೆನ್ನುವುದರಲ್ಲಿ ಎರಡನೇ ಮಾತಿಲ್ಲವೆಂಬುದು ಲೇಖಕರ ನಿಲುವು. ಕನ್ನಡ ಕವಿಗಳ ಸುಪ್ರಸಿದ್ಧ ಕವಿತೆಗಳನ್ನು ವಿವರಿಸುವ ಮೂಲಕ ಕವಿತಾ ಲೋಕದೊಳಗೆ ವಿಹರಿಸುವ ಮನು ಅವರು ಈ ನಾಡಿನ ಯುವಜನತೆ ಸೇರಿದಂತೆ ಕನ್ನಡಿಗರೆದೆಯಲ್ಲಿ ಪುಳಕ ಹುಟ್ಟಿಸುವಂತೆ ಈ ಲೇಖನಗಳನ್ನು ರಚಿಸಿ ವಿಶ್ಲೇಷಿಸಿದ್ದಾರೆ. ಬದುಕಿನ ಬವಣೆಯೇ ಪ್ರೀತಿ; ಮಮತೆಯ ಜ್ಯೋತಿ, ಕಷ್ಟ-ಸುಖಗಳೊಳಗಿಹುದು ಆರತಿಯೆಂಬ ಮಾತು ಸಾಮಾನ್ಯವಾದರೂ ಮಮತೆಯ ರೂಪಕವಾಗಿ ಇಲ್ಲಿ ಜ್ಯೋತಿ ಬೆಳಗುತ್ತದೆ. ಅದು ಕೇವಲ ಜ್ಯೋತಿಯಲ್ಲ: ಅನಂತ ಅರ್ಥಗಳಾರತಿ ಎಂದು ಬಣ್ಣಿಸುವುದು ಇಲ್ಲಿ ನನ್ನ ಕಾರ್ಯವಲ್ಲ. ಪ್ರೀತಿ, ಜ್ಯೋತಿ, ಬದುಕಿನ ಅನನ್ಯತೆ, ಬವಣೆ, ಜೀವನದ ನಶ್ವರತೆಯನ್ನು ಕಟ್ಟಿಕೊಡುವ ಕವಿತೆಗಳನ್ನು ಮನು ಅವರು ಎತ್ತಿಹಿಡಿದು ನಮ್ಮ ಓದುವ ಗೀಳಿಗೆ ಸ್ಫೂರ್ತಿಯನ್ನು ನೀಡಿದ್ದಾರೆ. ಪ್ರೀತಿಯೆಂದೊಡನೆ ರೋಮಿಯೋ ಜೂಲಿಯೆಟ್'ರ ಹೆಸರನ್ನು ಉದಾಹರಣೆಯಾಗಿ ತೆಗೆದುಕೊಳ್ಳುವ ನಮಗೆ ಈ ನೆಲದ ರಾಧಾಕೃಷ್ಣರ ಒಲವು ಏಕೆ ಅಷ್ಟಾಗಿ ಕಾಡುವುದಿಲ್ಲ? ಎಂದು ಪ್ರಶ್ನಿಸುವ ಲೇಖಕ ಕವಿಯ ಎದೆಯ ದನಿಯೇ ಸಾಹಿತ್ಯ. ಅದು ಯಾವ ಕ್ಷೇತ್ರದಿಂದ ದೊರೆತದ್ದಾದರೇನು? ಅಲ್ಲಿನ ವಸ್ತು ವಿಷಯವಷ್ಟೇ ಮುಖ್ಯವೆಂದು ಹೇಳಿ ಸಿನಿಮಾ ಸಾಹಿತ್ಯವೊಂದನ್ನು ಈ ಲೇಖನ ಸಂಕಲನಕ್ಕೆ ಸೇರಿಸಿ ವಿಶ್ಲೇಷಿಸಿದ್ದಾರೆ.