About this book
ಸಂತೃಪ್ತಿ' ನಾಟಕದಲ್ಲಿ ಮೂರು ತಲೆಮಾರಿನಿಂದ ಕೂಡಿದ ತುಂಬು ಕುಟುಂಬದ ಸೊಗಡಿದೆ. ಸೊಸೆ ಅತ್ತೆ-ಮಾವರನ್ನು ನೋಡುವ ರೀತಿ, ಅವರಿಗೂ ಸೊಸೆಯ ಮೇಲಿನ ಪ್ರೀತಿ, ಕಾಳಜಿ, ಮಗ ತಂದೆ-ತಾಯಿಯರಿಗೆ ತೋರುವ ಗೌರವ, ಅಜ್ಜ-ಅಜ್ಜಿ ಮೊಮ್ಮಕ್ಕಳ ನಡುವಿನ ಬಾಂಧವ್ಯ, ಹದಿಹರೆಯದವರ ಆಶೋತ್ತರಗಳಿಗೂ ಮಾನ್ಯತೆ ನೀಡಿ ಪ್ರೋತ್ಸಾಹಿಸುವ, ಬೆಂಬಲಿಸುವ ಹಿರಿಯರ ಮನೋಭಾವ, ಸೀತಾರಾಮರಾಯರ ತಂದೆಯಿಂದ ಬಳುವಳಿಯಾಗಿ ಬಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿಕೆ, ಮೇಲು-ಕೀಳು, ಜಾತಿ ಭೇದವಿಲ್ಲದೆ ಕಷ್ಟದಲ್ಲಿರುವವರಿಗೆ ಆರ್ಥಿಕವಾಗಿ ಮಾನಸಿಕವಾಗಿ ಸಹಾಯಹಸ್ತ ಚಾಚುವ ಗುಣ, ಮನೆಯ ಹಿರಿಯನಾಗಿ ಇತರ ಸದಸ್ಯರ ಬೇಕು ಬೇಡಗಳನ್ನು ತಿಳಿದು ಅದಕ್ಕೆ ಸ್ಪಂದಿಸುವ ಬಗೆ ಇವೆಲ್ಲವೂ ಸ್ವಸ್ಥ ಸಮಾಜದ ಕುರುಹಾಗಿದೆ. ಅವಿಭಕ್ತ ಕುಟುಂಬದ ಸೊಗಡನ್ನೇ ಕಳೆದುಕೊಂಡು, ಸುಸಂಸ್ಕೃತ ಪರಿವಾರದ ಬೇರಾದ ಪ್ರೀತಿ, ಗೌರವ, ವಿಶ್ವಾಸದ ಕೊರತೆಯಿಂದ ಛಿದ್ರವಾಗಿರುವ ಮನೆಗಳು, ಅಸ್ವಸ್ಥ ಮನಸ್ಸುಗಳಿಂದ ಕೂಡಿರುವ ಸಮಾಜಕ್ಕೆ ಮಾದರಿಯಾಗಿದೆ. ಅಷ್ಟೇ ಅಲ್ಲ ಊರಿನಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು, ಕೃಷಿಯ ಮಹತ್ವದ ಸವಿಸ್ತಾರ ವಿವರಣೆ, ನಡೆಸಲ್ಪಡುವ ಭಜನೆ, ಭಗವದ್ಗೀತೆ, ಯಕ್ಷಗಾನ, ಯೋಗದ ಉಚಿತ ಕಲಿಕಾ ತರಗತಿಗಳ ಪ್ರಸ್ತಾಪ, ಹೀಗೆ ಗ್ರಾಮದಲ್ಲಿ ಉತ್ತಮ ಕೆಲಸಗಳನ್ನು ಮಾಡಿದವರನ್ನು ಗುರುತಿಸಿ ಸನ್ಮಾಸಿಸುವುದು ಇವೆಲ್ಲವೂ ಮುಂದಿನ ಪೀಳಿಗೆಗೆ ಸುಸಂಸ್ಕೃತರಾಗಿ ಬೆಳೆಯುವಲ್ಲಿ ಮಾರ್ಗದರ್ಶಕವಾಗಿದೆ. ಇದು ಲೇಖಕಿಗೆ ಇರುವ ಸ್ವಸ್ಥ ಸಮಾಜದ ಕಾಳಜಿಯನ್ನು ತೋರುತ್ತದೆ, ಊಟಕ್ಕೊಂದು ಉಪ್ಪಿನಕಾಯಿಯಂತೆ ಗೋಪಿ ಪಾತ್ರದ ಹಾಸ್ಯದ ಮೆರುಕು, ಒಟ್ಟಿನಲ್ಲಿ ಓದುಗರಿಗೆ ಸ್ವಸ್ಥ ಸಮಾಜದ ಕಾಳಜಿಯನ್ನು ತೋರುತ್ತದೆ. ಊಟಕ್ಕೊಂದು ಸಂತೃಪ್ತಿ ನೀಡುವುದು ಖಂಡಿತಾ, 'ಗುಂಡಣ್ಣ' ನಾಟಕ ಹಳ್ಳಿಯಲ್ಲಿ ಕೃಷಿಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿರುವ ಗುಂಡಣ್ಣ ನಮ್ಮ ದೇಶದ ಬೆನ್ನೆಲುಬಾದ ಕೃಷಿ ಅದರ ಕರ್ತೃವಾದ ರೈತನ ಮಹತ್ವ, ನಾವು ತಿನ್ನುವ ಅನ್ನದ ಮೂಲ ಭತ್ತ ಹಾಗೂ ಆಹಾರ ಪದಾರ್ಥಗಳನ್ನು ಬೆಳೆಯುವ ವಿಚಾರಗಳನ್ನು ಮಕ್ಕಳಿಗೆ ಎಳವೆಯಲ್ಲೇ ತಿಳಿಸಿಕೊಡುವ ಕಾರ್ಯವನ್ನು ನಿರಂತರವಾಗಿ ನಡೆಸುವ ಕಥಾಹಂದರದ ಮೂಲಕ ಅದರ ಬಗ್ಗೆ ಬೆಲೆ, ಆಸಕ್ತಿ, ಗೌರವ ಮೂಡಿಸುವ ಪ್ರಯತ್ನವಾಗಿದೆ. ಇನ್ನು ತುಕ್ರ ಮತ್ತು ತೋಮ (ಸಮಾಜ ಸುಧಾರಕರು) ಈ ನಾಟಕ ಹಾಸ್ಯ ಲೇಪನದಿಂದ ಕೂಡಿದ್ದು ಡಿಗ್ರಿ ಕಲಿತು ಸರ್ಕಾರಿ ಕೆಲಸಕ್ಕಾಗಿ ಅಲೆಯುವ ಗೆಳೆಯರು ತಮ್ಮ ಮನಸ್ಸನ್ನು ಬದಲಾಯಿಸಿ ಕಲಿತವರೆಲ್ಲರೂ ಹೀಗೆ ಸರ್ಕಾರಿ ಕೆಲಸಕ್ಕೆ ಕಾಯುವ ಬದಲು ಕುಟುಂಬದ ಕುಲಕಸುಬು, ಕೃಷಿಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿಗಳಾಗಿ ಬದುಕುವ ನಿರ್ಧಾರ ಮಾಡುವುದಲ್ಲದೆ ತಮ್ಮ ಇತರ ಗೆಳೆಯರನ್ನೂ ಪ್ರೇರೇಪಿಸಿ ಎಲ್ಲರೂ ಸೇರಿ ತಮ್ಮ ಗ್ರಾಮದ ಮಹಿಳೆಯರು, ನಿರುದ್ಯೋಗಿಗಳೂ ತಮ್ಮ ಊರುಗಳಲ್ಲೇ ಇದ್ದುಕೊಂಡು ಸ್ವಾವಲಂಬಿಗಳಾಗಿ ದುಡಿಯಲು ಇರುವ ಹಲವು ಮಾರ್ಗಗಳು, ಅದರ ಕುರಿತು ತರಬೇತಿ, ಸರ್ಕಾರದಿಂದ ಅದಕ್ಕಾಗಿ ದೊರೆಯುವ ಆರ್ಥಿಕ ನೆರವುಗಳ ಬಗ್ಗೆ ಮಾಹಿತಿ ನೀಡುವ ಕುರಿತು ಆಲೋಚಿಸುವುದು. ಅಷ್ಟೇ ಅಲ್ಲ ತಾವು ದುಡಿದು ಬೆಳೆದದ್ದರಲ್ಲಿ ಸಮಾಜಕ್ಕೂ ಒಂದು ಪಾಲು ಎಂಬಂತೆ ಅಗತ್ಯ ಉಳ್ಳವರಿಗೆ ಹಂಚಿ ಬದುಕುವ ಮನೋಭಾವ ಇವೆಲ್ಲವೂ ಹೆಚ್ಚಿನ ದುಡಿಮೆಗಾಗಿ ತಂದೆ-ತಾಯಿ, ಮನೆ ಊರನ್ನೇ ಬಿಟ್ಟು ಪರದೇಶಕ್ಕೆ ಹಾರುವ, ದುಂದುವೆಚ್ಚ ಮಾಡಿ ಕಳೆಯುವ ಯುವ ಪೀಳಿಗೆಗೆ ಪ್ರೇರಣೆಯಾಗಿದೆ. ಸ್ವತಃ ಹಾಸ್ಯ ಪ್ರಧಾನ ಪಾತ್ರದಲ್ಲಿ ನಟಿಸಿ ಯಶಸ್ವಿಯಾಗಿರುವ ಶ್ರೀಮತಿ ಪುಷ್ಪಾ ಜೋಗಿಯವರು ಇಲ್ಲಿರುವ ಮೂರು ನಾಟಕಗಳಲ್ಲೂ ಹಾಸ್ಯ ಪ್ರಧಾನ ಸಂವಾದಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಪ್ರಯತ್ನ ಮಾಡಿದ್ದಾರೆ.